Sunday 18 January 2015

                       ಫಲಕ್ಕೆ ತಕ್ಕ ಪ್ರತಿಫಲ

            ಒಬ್ಬ ರೈತನಿದ್ದನು. ಅವನು ತನ್ನ ಹೊಲದಲ್ಲಿ ಅತ್ಯುತ್ತಮ ದರ್ಜೆಯ ಕಾಳುಗಳನ್ನು ಬೆಳೆಯುತ್ತಿದ್ದನು. ಪ್ರತಿ ವರ್ಷ ಅವನು ಬೆಳೆದ ಕಾಳುಗಳಿಗೆ ರಾಜ್ಯ ಮಟ್ಟದ ಕಾಳುಗಳ ಪ್ರದರ್ಶನದಲ್ಲಿ ಬಹುಮಾನಗಳು ಲಭಿಸುತ್ತಿದ್ದವು.ಒಂದು ಸಾರಿ ಒಬ್ಬ ವರದಿಗಾರನು ಆ ರೈತನನ್ನು ಸಂದರ್ಶಿಸಿ ಕುತೂಹಲವೆನ್ನಿಸುವಂಥ ಮಾಹಿತಿಯನ್ನು ಹೊರ ತೆಗೆದನು. ಆದೇನೆಂದರೆ ಆ ರೈತನು ತನ್ನ ಕಾಳುಗಳನ್ನು ಅಕ್ಕಪಕ್ಕದ ಜಮೀನಿನ ರೈತರುಗಳೊಂದಿಗೆ ಹಂಚಿಕೊಳ್ಳುತ್ತಿದ್ದನು.
         ನಿನ್ನ ನೆರೆ ಹೊರೆಯ ರೈತರೂ ಕೂಡ ಸ್ಪರ್ಧೆಯಲ್ಲಿ ಪಾಲ್ಗೊಳ್ಳುತ್ತಿರುವಾಗ ಅದು ಹೇಗೆ ನೀನು ನಿನ್ನ ಕಾಳುಗಳನ್ನು ಅವರೊಂದಿಗೆ ಹಂಚಿಕೊಳ್ಳುತ್ತಿ? ಎಂದು ವರದಿಗಾರನು ಆ ರೈತನನ್ನು ಕೇಳಿದನು.
         ನಿನಗೆ ಗೊತ್ತಿಲ್ಲವೇ? ಬೀಸುವ ಗಾಳಿಯಿಂದ ನೆರೆ ಹೊರೆಯ ಜಮೀನಿನ ಕಾಳುಗಳು ನನ್ನ ಹೊಲಕ್ಕೂ ನನ್ನ ಹೊಲದ ಕಾಳುಗಳು ಅಕ್ಕಪಕ್ಕದ ಜಮೀನಿಗು ಹಾರಿ ಹೋಗಿ ಬೀಳುವುದಿಲ್ಲವೇ? ಅವರು ಕಳಪೆ ದರ್ಜೆಯ ಕಾಳುಗಳನ್ನು ಬೆಳೆದರೆ ನಾನೂ ಕೂಡ ಅದನ್ನೇ ಬೆಳೆದಂತಾಗುವುದಿಲ್ಲವೇ? ನಾನು ಅತ್ಯುತ್ತಮ ಕಾಳುಗಳನ್ನು ಬೆಳೆಯಬೇಕಾದರೆ ನೆರೆ ಹೊರೆಯವರು ಸಹ ಅಷ್ಟೇ ಅತ್ಯುತ್ತಮವಾದುದನ್ನೇ ಬೆಳೆಯಬೇಕಾಗುತ್ತದೆ.ಹೀಗೆ ರೈತನು ಸೂಕ್ಷ್ಮವಾಗಿ ತನ್ನ ಅಂತರಂಗವನ್ನು ತೆರೆದಿಟ್ಟನು. ಎಲ್ಲಿಯವರೆಗೆ ನೆರೆ ಹೊರೆಯವರ ಫಸಲು ಉತ್ತಮವಾಗಿರುವುದಿಲ್ಲವೋ ಅಲ್ಲಿಯವರೆಗೆ ತನ್ನದೂ ಸಹ ಕಳಪೆಯೇ. ಹಾಗೆಯೇ ಈ ನೀತಿ ಜೀವನಕ್ರಮಕ್ಕೆ ಸಹ ಹೊಂದಿಕೆಯಾಗುತ್ತದೆ.
           ಯಾರು ಶಾಂತಿ ಮತ್ತು ಸಹಬಾಳ್ವೆಯ ಜೀವನವನ್ನು ಇಚ್ಛಿಸುತ್ತಾರೋ ಅವರು ನೆರೆ ಹೊರೆಯವರಿಗೂ ಮತ್ತು ಸಹೋದ್ಯೋಗಿಗಳಿಗೂ ಸಹಾಯ ಹಸ್ತವನ್ನು ನೀಡಬೇಕಾಗುತ್ತದೆ. ಯಾರು ತಮ್ಮ ಬದುಕು ಹಸನಾಗಿರಬೇಕೆಂದು ಬಯಸುವರೋ ಅವರು ತಮ್ಮ ಸುತ್ತಮುತ್ತಲಿನವರೂ ನೆಮ್ಮದಿಯಿಂದಿರಬೇಕೆಂದು ಅಪೇಕ್ಷಿಸಬೇಕಾಗುತ್ತದೆ. ಒಬ್ಬರ ಬದುಕು ಎಷ್ಟು ದಿನ ಬಾಳಿದರೆಂಬುದು ಮುಖ್ಯವಲ್ಲ. ಎಷ್ಟು ಜನರೊಟ್ಟಿಗೆ ಬಾಳ್ವೆ ನಡೆಸಿದರೆನ್ನುವುದು ಮುಖ್ಯ.
          ಈ ಕಥೆಯ ನೀತಿ ಪಾಠ : ಯಶಸ್ಸು ಎಂಬುದನ್ನು ಒಬ್ಬನಿಂದ ಸಾಧಿಸಲಾಗುವುದಿಲ್ಲ, ಅದು ಸಾಂಘಿಕ ಯತ್ನದಿಂದ ಮಾತ್ರ ಸಾಧ್ಯ.ಆದುದರಿಂದ ಎಲ್ಲ ಒಳ್ಳೆಯ ಅಭ್ಯಾಸಗಳನ್ನು, ಹೊಸ ಯೋಚನೆಗಳನ್ನು, ಜ್ಞಾನವನ್ನು ಮಿತ್ರರ ಜೊತೆ ಹಂಚಿಕೊಳ್ಳಿ.
                                                                                                    ಸಂಗ್ರಹ
                                                                                                    ಅಕ್ಷಿತಾ
                                                                                                   8ಎ ತರಗತಿ

No comments: